Wednesday, November 25, 2009

ಆದಿವಾಸಿ

ಆದಿವಾಸಿಗಳನ್ನು ಸ್ವತಂತ್ರ ಭಾರತದಲ್ಲಿ ಅತ್ಯಂತ ಹೆಚ್ಚು ಶೋಷಣೆಗೊಳಗಾದ ವರ್ಗ ಎನ್ನಬಹುದು. ಅತ್ಯಂತ ಬಡತನದಲ್ಲಿ ಬದುಕುವ ಇವರಿಗೆ ಶಾಲೆಗಳು, ಆಸ್ಪತ್ರೆಗಳು, ರಸ್ತೆಳು ಹಾಗೂ ವಿದ್ಯುತ್ ನಂತಹ ಮೂಲಭೂತ ಸೌಕರ್ಯಗಳು ಕೂಡ ಲಭ್ಯವಾಗುವುದಿಲ್ಲ. ಇಂದಿನವರೆಗೆ ಬಂದ ಎಲ್ಲಾ ಎಲ್ಲಾ ಸರ್ಕಾರಗಳಿಗೆ ನೈಸರ್ಗಿಕ ಸಂಪನ್ಮೂಲಗಳಾದ ನದಿಗಳು, ಲೋಹಗಳು, ಕಾಡು ಹಾಗು ಭೂಮಿಗಳನ್ನು ಆಕ್ರಮಿಸಿಕೊಳ್ಳುವ ದುರುದ್ದೇಶಗಳಿದ್ದುದ್ದು ಸ್ಪಷ್ಟವಾಗಿದೆ. "ರಾಷ್ಟ್ರಿಯ ಅಭಿವೃದ್ದಿ"ಯ ಹೆಸರಿನಲ್ಲಿ ಕಟ್ಟಿಸಲಾಗುತ್ತಿರುವ ದೊಡ್ಡ ಅನೆಕಟ್ಟುಗಳು, ಗಣಿಕಾರಿಕೆ, ಔದ್ಯೋಗಿಕ ಅಭಿವೃದ್ದಿ ಹಾಗೂ ಮಾಹಿತಿ ತಂತ್ರಜ್ಞಾನ ಪಾರ್ಕುಗಳ ಕಾರಣದಿಂದಾಗಿ ಇಂದು ಭಾರತದ ಆದಿವಾಸಿಗಳು ಸ್ಥಳಾಂತರದ ಅಪಾಯದಲ್ಲಿ ಬದುಕುತ್ತಿದ್ದಾರೆ. ಈ 'ಅಭಿವೃದ್ದಿ'ಯಿಂದಾಗಿ ಅಂದರೆ ದೊಡ್ಡ ಔದ್ಯೋಗಿಕ ಸಂಸ್ಥೆಗಳ ಲಾಭ ಹೆಚ್ಚಿಸುವಂಥ ಅಭಿವೃದ್ದಿಯಿಂದಾಗಿ ಈಗಾಗಲೇ ಬಹಳಷ್ಟು ಆದಿವಾಸಿಗಳು ತಲೆಯ ಮೇಲಿನ ಸೂರನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡ, ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ದಿ ಇಲಾಖೆ ತಯಾರಿಸಿದ 'ರಾಜ್ಯ ಕೃಷಿಕ ಸಂಬಂಧಗಳು ಹಾಗೂ ಇನ್ನೂ ಮುಗಿಯದ ಭೂ-ಸುಧಾರಣ ಕ್ರಮಗಳು' ಎಂಬ ವರದಿಯಲ್ಲಿ ಮಧ್ಯ ಭಾರತದಲ್ಲಿತಮ್ಮದೇ ಜಮೀನಿನಿಂದ ಹೊರದಬ್ಬಲ್ಪಡುತ್ತಿರುವ ಆದಿವಾಸಿಗಳು ಆ ಭಾಗಗಳಲ್ಲಿ ಶರವೇಗದಲ್ಲಿ ಹಚ್ಚುತ್ತಿರುವ ಮಾವೋವಾದಿಗಳ ಪ್ರಭಾವಗಳ ಬಗ್ಗೆ ಸ್ವಷ್ಟ ಉಲ್ಲೇಖವಿದೆ. ಹಾಗೂ ಛತ್ತೀಸಗಢದಲ್ಲಿ ಸಾಲ್ವಾಜುಡುಂಗೆ ಘೋಷನೆ ನೀಡುತ್ತಿರುವ ಸರ್ಕಾರದ ಧೋರಣೆಗಳನ್ನು ಜರಿಯಲಾಗಿದೆ. ಈ ವರದಿಯ ಪ್ರಕಾರ ಸಾಲ್ವಾಜುಡುಂಗೆ ಹಣಕಾಸಿನ ಸಹಾಯ ನೀಡುತ್ತಿರುವವರಲ್ಲಿ ಮೊದಲಿಗರು ಎಂದರೆ "ಟಾಟಾ" ಹಾಗೂ "ಎಸ್ಸಾರ್", ಹಾಗೂ ಈ ಎರಡೂ ಕಂಪನಿಗಳು ಖಾಲಿ ಜಮೀನನ್ನು ಸ್ವಾಧೀನಿಪಡಿಸಿ, ಗಣಿಗಾರಿಕೆಯ ಸ್ವಾಮಿತ್ವ ಗಳಿಸಲು ಹೆಣಗಾಡುತ್ತಿವೆ.

ಅಭಿವೃದ್ದಿಯ ಸಮಯದಲ್ಲಿ ಒಂದು ಯುದ್ದ

2008ರಲ್ಲಿ ಛತ್ತೀಸಗಢ, ಝಾರ್ಖಂಡ್, ಬಿಹಾರ್, ಆಂದ್ರಪ್ರದೇಶ್ ಒರಿಸ್ಸಾ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಭಾರತ ಸರ್ಕಾರವು ಭಯಾನಕ ಸೈನಿಕ ಕಾರ್ಯಾಚರಣೆಗಳನ್ನು ಕೈಗೆತ್ತಿಕೊಂಡಿತ್ತು.ಇದೇ ವರ್ಷದ ಸೆಪ್ಟಂಬರ್ ತಿಂಗಳಲ್ಲಿ ಮಧ್ಯ ಭಾರತದ ಭಾಗಗಳಲ್ಲಿ ಆದಿವಾಸಿಗಳು ಹಾಗೂ ಮಾವೋವಾದಿಗಳಿರುವ ಕಾಡುಗಳಲ್ಲಿ ಸರ್ಕಾರವು "ಆಪರೇಷನ್ ಗ್ರೀನ್ ಹಂಟ್" ಎಂಬ ಹೆಸರಿನ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಸರ್ಕಾರ ಪ್ರಾಯೋಜಿತ ಸಾಲ್ವಾಜುಡುಂ (ಅಥವಾ ಶುದ್ದೀಕರಣ ಬೇಟೆ) ಹಾಗೂ ಅನ್ಯ ಪ್ಯಾರಾಮಿಲಿಟರಿ ಹಾಗೂ ಕೋಬ್ರಾದಂತಹ ವಿಶೇಷ ಪಡೆಗಳು ಸೇರಿ ಮಾವೋವಾದಿಗಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ನುಗ್ಗಿ ಅಲ್ಲಿನ ಭೂಮಿಯನ್ನು ನಿರ್ಮಲೀಕರಿಸಿ, ಔದ್ಯೋಗಿಕರಣಕ್ಕಾಗಿ ಆ ಪ್ರದೇಶವನ್ನು ಸ್ವಾಧೀನಗೊಳಿಸುವುದು ಹಾಗೂ ಆದಿವಾಸಿಗಳನ್ನು ಬಲವಂತವಾಗಿ ಸ್ಥಳಾಂತರಗೊಳಿಸಿ ಅವರ ಜೀವನಾಧಾರವನ್ನೇ ಕಸಿದುಕೊಳ್ಳುವ ಹೀನ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಮಾಧ್ಯಮಗಳಲ್ಲಿ ಭಾರತೀಯ ಸುರಕ್ಷಾ ಪಡೆಗಳು ಮಾವೋವಾದಿಗಳ ಜೊತೆ ಕೈಗೊಂಡ ಯುದ್ದಗಳ ಬಗ್ಗೆ ಪ್ರತಿದಿನ ಸುದ್ದಿಗಳು ಬರುತ್ತಾವಾದರು, ಅತ್ಯಂತ ಪ್ರಮುಖ ಸುದ್ದಿಗಳಿಗೆ ಧ್ವನಿಯೇ ಸಿಗುತ್ತಿಲ್ಲ.

ಭಾಗ 2


  • ಮೂರುವರೆ ಲಕ್ಷಕ್ಕಿಂತ ಹೆಚ್ಚಿನ ಆದಿವಾಸಿಗಳನ್ನು ಬಲವಂತವಾಗಿ ಹೊರ ಹಾಕಲಾಗಿದೆ. ದಾಂತೆವಾಡದ ಸುಮಾರು ಅರ್ಧದಷ್ಟು ಜನರಿಗೆ ತಲೆಯ ಮೇಲೆ ಸೂರೆ ಇಲ್ಲದಂತಾಗಿದೆ. ಅಲ್ಲಿಯ ಸ್ತ್ರೀಯರ ಮೇಲೆ ಬಲತ್ಕಾರಗಳಾಗುತ್ತಿದೆ. ಹೆಣ್ಣುಮಕ್ಕಳನ್ನು ಕೊಲ್ಲಲಾಗುತ್ತಿದೆ. ಯುವಕರನ್ನು ಅಂಗ ಹೀನರನ್ನಾಗಿ ಮಾಡಲಾಗುತ್ತಿದೆ.
  • ಕಾಡುಗಳಿಂದ ಈಡಿ ಹೋಗಲಾದ ಸುಮಾರು 5000 ಆದಿವಾಸಿಗಳನ್ನು ಒಟ್ಟಿಗೆ ಸೇರಿಸಿ, ಅವರನ್ನು ಸಾಲ್ವಾಜುಡುಂ ನಿರ್ವಹಿಸುತ್ತಿರುವ ನಿರಾಶ್ರಿತರ ಶಿಭಿರಗಳಲ್ಲಿ ಕೂಡಿಹಾಕಲಾಗಿದ್ದು, 640 ಗ್ರಾಮಗಳು ನಿರ್ಜನವಾಗಿವೆ.
  • ಒಂದು ಲಕ್ಷದಷ್ಟು ಆದಿವಾಸಿಗಳು ಆಂಧ್ರ ಮತ್ತು ಓರಿಸ್ಸಾಗಳಿಗೆ ವಲಸೆ ಹೋಗಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಛತ್ತೀಸಗಢದ ಕಾಡುಗಳಲ್ಲಿ ತಮ್ಮ ಜೀವವನ್ನುಳಿಸಿಕೊಳ್ಳಲು ಅಲ್ಲಲ್ಲಿ ಅಡಗಿ ಬದುಕುತ್ತಿದ್ದಾರೆ.
  • ಸ್ವತಂತ್ರ ವರದಿಗಳ ಪ್ರಕಾರ, ಈ ಆದಿವಾಸಿಗಳಿಗೆ ಆಹಾರ, ವಸತಿ, ನೀರು, ಆರೋಗ್ಯ ಹಾಗೂ ಶಿಕ್ಷಣದ ಸೌಲಭ್ಯಗಳೇ ಸಿಕ್ಕುತ್ತಿಲ್ಲ. ಸುರಕ್ಷಾ ಪಡೆಗಳು ಈ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಭಯ ಮತ್ತು ಶೋಷಣೆಯ ವಾತಾವರಣವನ್ನು ಕಲ್ಪಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶವಿದ್ದರೂ ಕೂಡ ರಾಜ್ಯ ಸರ್ಕಾರವು, ಆದಿವಾಸಿಗಳ ಪುನರ್ವಸತಿಯ ಕಾರ್ಯವನ್ನು ಕೈಗೊಳ್ಳುವಲ್ಲಿ ಸೋತಿದೆ.
  • ಸರ್ವೋಚ್ಚ ನ್ಯಾಯಾಲಯವು ಪರಿಹಾರ ಹಾಗೂ ಪುನರ್ವಸತಿ ಕ್ರಮಗಳ ಕಾರ್ಯಗತಗೊಳಿಸುವಿಕೆಯ ಬಗ್ಗೆ ಕೈಗೊಂಡ ಕಾರ್ಯದ ವರದಿಯನ್ನು (ಆಕ್ಷನ್ ಟೇಕನ್ ರಿಪೋರ್ಟ್) ನೀಡಬೇಕು ಹಾಗೂ ನ್ಯಾಯವೇದ್ಯ ಅಪರಾಧಗಳನ್ನು ಮಾಡಿದವರ ಮೇಲೆ ಎಫ್.ಐ.ಆರ್ ಗಳನ್ನು ದಾಖಲಿಸಬೇಕು ಎಂದು ಸರ್ಕಾರವು ತಾಕೀತು ಮಾಡಿದೆ.

Monday, September 14, 2009

Monday, September 7, 2009

ಸಮುದಾಯ ಬಾನುಲಿ

ಸಮುದಾಯ ಬಾನುಲಿ ಭಾರತಕ್ಕೆ ಹೊಸದು. ಆದರೆ, ನೇಪಾಳ, ಶ್ರೀಲಂಕಾ, ಲ್ಯಾಟಿನ್ ಅಮೇರಿಕಾ, ಉತ್ತರ ಅಮೇರಿಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್, ಆಫ್ರಿಕಾ, ಯುರೋಪ್ ಮುಂತಾದ ದೇಶಗಳಲ್ಲಿ ಜನಜನಿತ. ನಮ್ಮ ದೇಶದಲ್ಲಿ ಸಮುದಾಯ ಬಾನುಲಿ ಪ್ರಾರಂಭಿಸಲು ಭಾರತ ಸರ್ಕಾರ 2006ರ ನವಂಬರ್ 16ರಂದು ಒಂದು ಪಾಲಿಸಿಯನ್ನು ಹೊರಡಿಸಿತು. ಇದರ ಪ್ರಕಾರ ನೊಂದಾಯಿತ ಯಾವುದೇ ಸಂಘ ಸಂಸ್ಥೆಯು ಪರವಾನಗಿಯನ್ನು ಪಡೆದು, ಅವರದೇ ಆದ ಸಮದಾಯ ಬಾನುಲಿಯನ್ನು ತರಂಗಗಳಲ್ಲಿ ಪ್ರಾರಂಭಿಸಬಹುದು. ಈ ಪಾಲಿಸಿಯನ್ನು ಬಳಸಿಕೊಂಡು ಈಗಾಗಲೇ ಹಲವಾರು ವಿಶ್ವವಿದ್ಯಾಲಯಗಳು, ಕೃಷಿ ವಿಶ್ವವಿದ್ಯಾಲಯಗಳು, ಸರ್ಕಾರೇತರ ಸಂಸ್ಥೆಗಳು ಸಮುದಾಯ ಬಾನುಲಿಗಳನ್ನು ಪ್ರಾರಂಬಭಿಸಿವೆ. ಸಂಖ್ಯೆ ನಿಧಾನವಾಗಿ ಬೆಳೆಯುತ್ತಿದೆ.

ಭಾರತದಲ್ಲಿ ಈಗಾಗಲೇ ಸುಮಾರು 50 ಕೃಷಿ ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು, ಸುಮಾರು 47 ವಿಶ್ವವಿದ್ಯಾಲಯದ ಸಮುದಾಯ ಬಾನುಲಿಗಳು , ಸುಮಾರು 12 ಸರ್ಕಾರೇತರ ಸಂಸ್ಥೆಗೆ ಪರವಾನಗಿ ದೊರೆತ ಬಾನುಲಿಗಳು ಚಾಲ್ತಿಯಲ್ಲಿವೆ. ನಮ್ಮ ಕರ್ನಾಟಕದಲ್ಲಿ ಹೇಳುವುದಾದರೆ ಸದ್ಯಕ್ಕೆ ಒಂದು ಸರ್ಕಾರೇತರ ಸಂಸ್ಥೆಗೆ (ಮೈರಾಡ) ಪರವಾನಗಿ ದೊರೆತಿದ್ದು, ಕೋಲಾರ ಜಿಲ್ಲೆಯ, ಬಂಗಾರಪೇಟೆ ತಾಲ್ಲೂಕಿನ, ಬೂದಿಕೋಟೆಯಲ್ಲಿ ಸುಮಾರು ನಾಲ್ಕು ತಿಂಗಳಿನಿಂದ 90.4 ಕಂಪನಾಂಕದಲ್ಲಿ ಪ್ರಾಯೋಗಿಕ ಪ್ರಸಾರವಾಗುತ್ತಿದೆ.

ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟಂತೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸುಮಾರು ಒಂದು ವರ್ಷದಿಂದ ಸಮುದಾಯ ಬಾನುಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಇತ್ತ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಹಾವೀರ್ ಜೈನ್ ಕಾಲೇಜಿನಲ್ಲಿ ಸುಮಾರು ಒಂದೂವರೆ ವರ್ಷದಿಂದ 90.4 ಕಂಪನಾಂಕದಲ್ಲಿ ತರಂಗಗಳಲ್ಲಿ ಪ್ರಸಾರವಾಗುತ್ತಿದೆ. ಶ್ರೀರಮಣ ಮಹರ್ಷಿ ಅಕಾಡೆಮಿಯಲ್ಲಿ ಸುಮಾರು ಒಂದು ವರ್ಷದಿಂದ 90.4 ಕಂಪನಾಂಕದಲ್ಲಿ ಪ್ರಸಾರವಾಗುತ್ತಿದೆ.ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಷನ್ ಸೆಂಟರ್ನಲ್ಲಿ ಸುಮುದಾಯ ರೇಡಿಯೋ ಕೇಂದ್ರ ಸೆಪ್ಟಂಬರ್ 12ರಂದು ಪ್ರಾರಂಭಗೊಂಡಿದೆ ಹಾಗೂ 90.4 ಮೆಗಾ ಹರ್ಡ್ಸ್ ಕಂಪನಾಂಕಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಮಂಗಳೂರಿನಲ್ಲಿ ಸಂತ ಅಲೋಷಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗವು ಸುಮಾರು ಒಂದು ತಿಂಗಳಿನಿಂದ ಪ್ರಾಯೋಗಿಕವಾಗಿ 107.8 ಕಂಪನಾಂಕದಲ್ಲಿ ಪ್ರಸಾರಮಾಡುತ್ತಿದೆ. ತುಮಕೂರಿನಲ್ಲಿ ಸಿದ್ದಾರ್ಥ ಮಿಡಿಯಾ ಸೆಂಟರ್ ನವರು ಸುಮಾರು ಆರು ತಿಂಗಳಿನಿಂದ ಪ್ರಾಯೋಗಿಕವಾಗಿ ಪ್ರಸಾರ ಮಾಡುತ್ತಿದ್ದಾರೆ. ಗುಲ್ಬರ್ಗದಲ್ಲಿ ಶ್ರೀ ಶರಣ ಬಸವೇಶ್ವರ ವಿಧ್ಯಾವರ್ದಕ ಸಂಘದ 94.6 ಕಂಪನಾಂಕ ನಿನ್ನೆ ತಾನೆ (ಆಗಸ್ಟ್ 28, 2009) ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರು ಚಾಲನೆಯನ್ನು ನೀಡುವ ಮುಖಾಂತರ ತರಂಗಗಳಲ್ಲಿ ಪ್ರಸಾರ ಮಾಡಿತು.


ಏನಿದು ಸಮುದಾಯ ಬಾನುಲಿ?

ಸಮುದಾಯ ಬಾನುಲಿ ಅಂದರೆ ಒಂದು ನಿರ್ದಿಷ್ಟ ಸಮುದಾಯವೊಂದರ ಸದಸ್ಯರಿಂದ ನಡೆಸಲ್ಪಡುವ, ಸಮುದಾಯದ ಒಡೆತನಕ್ಕೊಳಪಟ್ಟ ಮತ್ತು ಸಮುದಾಯದಲ್ಲೇ ಇರುವಂತಹ ರೇಡಿಯೋ ವ್ಯವಸ್ಥೆ. ಅಂದರೆ ಒಂದು ನಿರ್ದಿಷ್ಟ ಸಮುದಾಯದ ಅಭಿವೃದ್ಧಿಯ ಸಲುವಾಗಿ ಸರ್ಕಾರದ ಸಹಭಾಗಿತ್ವದಲ್ಲಿ ಕಾರ್ಯವಹಿಸುವ ರೇಡಿಯೋ. ಇದರಲ್ಲಿ ಕೇಳುಗರು ಮತ್ತು ಕಾರ್ಯಕ್ರಮ ಮಾಡುವವರು ಸಾಮಾನ್ಯವಾಗಿ ಒಂದೇ ಸಮುದಾಯದವರು ಆಗಿರುತ್ತಾರೆ. ಸಮುದಾಯ ಬಾನುಲಿಯ ಹಿಂದಿರುವ ಉದ್ದೇಶಗಳೆಂದರೆ ಸಮುದಾಯದ ಶೈಕ್ಷಣಿಕ ಅಭಿವೃದ್ಧಿ, ಸಾಂಸ್ಕೃತಿಕ ಮತ್ತು ಸಾಮಾಜಿಕ ಬೇಡಿಕೆಗಳನ್ನು ನಿವೇದಿಸುವುದು. ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳು ಸಮುದಾಯ ರೇಡಿಯೋ ಕೇಂದ್ರ ಸ್ಥಾಪನೆಯಾಗಿರುವ ಪ್ರದೇಶದ ಭಾಷೆಯಲ್ಲಿಯೇ ಇರುತ್ತವೆ. ಅಲ್ಲದೇ ಸ್ಥಳೀಯ ಸಮುದಾಯ ಜನರ ಆಡುಭಾಷೆ ಅಥವಾ ಉಪಭಾಷೆಗಳು ಕೂಡ ಇಲ್ಲಿ ಪ್ರಸಾರ ಮಾಡಲು ಯೋಗ್ಯವಾಗಿರುತ್ತದೆ.

ಯಾರು ಅರ್ಹರು?


ಮೂರು ವರ್ಷಕ್ಕೆ ಮುಂಚೆ ನೊಂದಾಯಿತವಾಗಿರುವ ಯಾವುದೇ ಸಂಸ್ಥೆಯು ಸಮುದಾಯ ರೇಡಿಯೋ ಪರವಾನಗಿ ಪಡೆಯಲು ಅರ್ಹರಾಗಿದ್ದು, ಭಾರತ ಸರ್ಕಾರಕ್ಕೆ ಪರವಾನಗಿಯನ್ನು ಪಡೆಯಲು ಅರ್ಜಿಯನ್ನು ಮತ್ತು ಹಲವು ದಾಖಲೆಗಳನ್ನು ಸಲ್ಲಿಸಬೇಕು. ಭಾರತ ಸರ್ಕಾರದಿಂದ ಪರವಾನಗಿ ದೊರೆಯಲು ಒಂದು ವರ್ಷ ಕಾಲ ಬೇಕಾಗುತ್ತದೆ. ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಬಗೆಗೆ, ಇನ್ನಷ್ಟು ಮಾಹಿತಿಯನ್ನು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರದ ವೆಬ್ ಸೈಟ್ ಆದ http://www.mib.nic.in ನಲ್ಲಿ ಪಡೆಯಬಹುದು.

ಖರ್ಚು ವೆಚ್ಚ?

ಸಮುದಾಯ ಬಾನುಲಿಯನ್ನು ಶುರು ಮಾಡಲು ಕಟ್ಟಡವನ್ನು ಹೊರತುಪಡಿಸಿದರೆ ಕನಿಷ್ಟ 3ರಿಂದ 4 ಲಕ್ಷಗಳು ಸಾಕಾಗುತ್ತದೆ. ಆದರೆ ಹಲವಾರು ಸಂಸ್ಥೆಯವರು ಕೋಟಿಗಟ್ಟಲೆ ಹಣವನ್ನು ದುಂದು ವೆಚ್ಚ ಮಾಡಿ ಸಮುದಾಯ ಬಾನುಲಿಗಳನ್ನು ಶುರು ಮಾಡುತ್ತಿದ್ದಾರೆ. ಉದಾ: ಗುಲ್ಬರ್ಗದ ಶ್ರೀ ಶರಣ ಬಸವೇಶ್ವರ ವಿದ್ಯಾವರ್ದಕ ಸಂಘವು ಸುಮಾರು ಒಂದು ಕೋಟಿ ರೂಗಳನ್ನು ಸಮುದಾಯ ಬಾನುಲಿಗೆ ಖರ್ಚು ಮಾಡಿರುವುದಾಗಿ ಮಾಧ್ಯಮಗಳ ಮೂಲಕ ತಿಳಿಸಿದೆ. ಸಮುದಾಯ ನಿರ್ವಹಿಸುವ ಸಮುದಾಯ ಬಾನುಲಿಗೆ ಇಷ್ಟೆಲ್ಲಾ ಖರ್ಚು ಮಾಡುವ ಅವಶ್ಯಕತೆ ಇಲ್ಲ. ಹೆಚ್ಚು ಹಣ ಖರ್ಚು ಮಾಡಿದರೆ ಸಂಸ್ಥೆಯವರು ಸಮುದಾಯದ ಜನರನ್ನು ಹೆಚ್ಚಾಗಿ ಭಾಗವಹಿಸಲು ಅವಕಾಶ ಕಲ್ಪಿಸುವುದಿಲ್ಲ ಜೊತೆಗೆ ಸಮುದಾಯ ಬಾನುಲಿಯನ್ನು ನಿಯಂತ್ರಿಸಲು ಪಟ್ಟಣಗಳಿಂದ ಮಾಧ್ಯಮದಲ್ಲಿ ಪದವಿ ಪಡೆದವರನ್ನು ಕರೆತಂದು ಕೂರಿಸುತ್ತಾರೆ.

ಸಣ್ಣ ಪುಟ್ಟ ಸಂಸ್ಥೆಗಳು ಇಷ್ಟೆಲ್ಲಾ ದುಡ್ಡು ಖರ್ಚು ಮಾಡಿ ಸಮುದಾಯ ಬಾನುಲಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಅದಕ್ಕಾಗಿ ಸಣ್ಣ ಮೊತ್ತದಲ್ಲೇ ಈ ಸಮುದಾಯ ಬಾನುಲಿಯನ್ನು ಪ್ರಾರಂಭಿಸಬಹುದು. ಇದಕ್ಕಾಗಿಯೇ ಹಲವಾರು ಸಂಸ್ಥೆಗಳು ಕಡಿಮೆ ವೆಚ್ಚದಲ್ಲಿ ಸಮುದಾಯ ಬಾನುಲಿಗಳನ್ನು ಶುರು ಮಾಡುವ ಪ್ರಯತ್ನವನ್ನು ಮಾಡುತ್ತಿವೆ. ನಿಮಗೂ ಸಹ ನಿಮ್ಮ ಸಮುದಾಯವನ್ನು ಇನ್ನಷ್ಟು ಅಭಿವೃದ್ದಿಯನ್ನು ಪಡಿಸಲು ಆಸಕ್ತಿಯಿದ್ದರೆ ಸಮುದಾಯ ಬಾನುಲಿಯನ್ನು ಶುರುಮಾಡಿ. ಭಾರತ ಸರಕಾರದ ಸಂಬಂಧ ಪಟ್ಟ ಇಲಾಖೆಗೆ ಅರ್ಜಿ ಹಾಕಿ. ನಿಮಗೆ ನಿಮ್ಮದೆ ಆದ ಒಂದು ರೇಡಿಯೋ ಅಂತ ಇರಲಿ.

video

Monday, January 26, 2009

ಆನೆಗುಂದಿ ತೂಗುಸೇತುವೆ ತುಂಗಭದ್ರ ನದಿಪಾಲು

ಜನವರಿ 22ರ ಗುರುವಾರ ಸಂಜೆ 4 ಗಂಟೆಯ ಸಮಯದಲ್ಲಿ ಹಂಪಿಯಿಂದ ನನ್ನ ಗೆಳೆಯನೊಬ್ಬ ತಲವಾರಘಟ್ಟದ ಹಂಪಿ ಮತ್ತು ಆನೆಗುಂದಿ ನಡುವೆ ಸಂಪರ್ಕ ಕಲ್ಪಿಸಲು ತುಂಗಭದ್ರಾ ನದಿಗೆ ಅಡ್ದಲಾಗಿ ಕಟ್ಟಿದ್ದ ಸೇತುವೆ ಕುಸಿದುಬಿದ್ದು 30 ಜನ ಸತ್ತಿದ್ದಾರೆ ಅಂತ ಮೊಬೈಲ್ ಗೆ ಸಂದೇಶ ಹಾಕಿದ್ದ. ನಾನು ತಲೆ ಕೆಡಿಸಿಕೊಳ್ಳಲಿಲ್ಲ ಸ್ವಲ್ಪ ಸಮಯದಲ್ಲೆ ಮತ್ತೆ ಆನೆಗುಂದಿಯಿಂದ ಇನ್ನಿಬ್ಬರು ಮೊಬೈಲ್ ಸಂದೇಶ ಕಳುಹಿಸಿದರು ಅದೇ ರೀತಿಯಾಗಿದ್ದು, ಸತ್ತವರ ಸಂಖ್ಯೆ 28 ಅಂತ ಇತ್ತು. ನನಗೆ ಅನುಮಾನ ಬಂದು ಕಾಲ್ ಮಾಡಿದೆ ಅದು ನಿಜ ಆಗಿತ್ತು ನನಗಂತು ನಂಬೋದಕ್ಕೆ ಆಗಲಿಲ್ಲ. ಜನವರಿ 1 ರಂದು ಅಲ್ಲಿನ ಕಾಮಗಾರಿಯನ್ನು ನೋಡುತ್ತಾ, ಸೇತುವೆಯ ಮೇಲೆ ಹತ್ತಿ ಇಳಿದು ಬಂದಿದ್ದೆ. ನಾವು ಯುನೆಸ್ಕೋ ಜೊತೆಗೆ ಹಂಪಿಯಲ್ಲಿ ಸಮುದಾಯಕ್ಕೆ ಸಂಬಂದಿಸಿದಂತೆ ಮಾದ್ಯಮ ಕೇಂದ್ರಗಳನ್ನು ಸ್ಥಾಪಿಸಲು ಪರಿಶೋದನೆ ಮಾಡಲು ಹೋದಾಗ ಹಂಪಿಯ ಬಹು ಜನರ ಮಾತುಗಳು ಮತ್ತು ಆನೆಗುಂದಿಯ ಎಲ್ಲಾ ಜನರು ಹೇಳಿದ್ದು ಈ ಸೇತುವೆಯ ಕುರಿತಾಗಿ.


ಹಂಪಿ ಮತ್ತು ಆನೆಗುಂದಿಯ ಸಂಪರ್ಕ ಕಲ್ಪಿಸುವ ಸೇತುವೆ ಕುಸಿಯುವುದಕ್ಕೆ ಮುಂಚಿನ ದೃಶ್ಯ

ಈ ಸೇತುವೆ ನಮ್ಮ ನಾಲ್ಕು ದಶಕಗಳ ಕನಸು ಇದು ನೆರವೇರಲು ಆಗುತ್ತಿಲ್ಲ 1993 ರಲ್ಲಿ ಸೇತುವೆ ಕಾಮಗಾರಿ ಪ್ರಾರಂಭವಾಗಿದ್ದು ಯುನೆಸ್ಕೋ ಸಂಸ್ಥೆ 1999 ರಲ್ಲಿ ಕಾಮಗಾರಿಯನ್ನು ನಿಲ್ಲಿಸಿತು ಅಂತ. ಯುನೆಸ್ಕೋ ಹೇಳುವ ಪ್ರಕಾರ ಸೇತುವೆಯ ಮೇಲೆ ಭಾರಿ ವಾಹನ ಸಂಚಾರ ಮಾಡಿದರೆ ವಿಶ್ವ ಪರಂಪರೆಯ ತಾಣವಾದ ಹಂಪಿಗೆ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ಅದರಲ್ಲೂ ತೂಗು ಸೇತುವೆಯಾದ್ದರಿಂದ ಕಾಮಗಾರಿಯನ್ನು ನಿಲ್ಲಿಸಿತ್ತು. ಅಂದ ಹಾಗೆ ಹಂಪಿಯಿಂದ ಆನೆಗುಂದಿಗೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ. ಅಕಸ್ಮಾತ್ ಸಾರಿಗೆ ವ್ಯವಸ್ಥೆ ಇದೆ ಅಂದ್ರೆ ಹಂಪಿಯಿಂದ ಹೊಸಪೇಟೆ ಅಥವಾ ಕಮಲಾಪುರ ಹೋಗಿ ಅಲ್ಲಿಂದ ಗಂಗಾವತಿ ಹೋಗಿ ಅಲ್ಲಿಂದ ಆನೆಗುಂದಿ ತಲಪಬೇಕು. ಈ ರೀತಿ ಹೋದ್ರೆ ಕಡಿಮೆ ಅಂದ್ರು ಸಹ ಮೂರರಿಂದ ನಾಲ್ಕು ಗಂಟೆ ಬೇಕಾಗುತ್ತದೆ. ಇದು ಬೇಡ ಅಂದ್ರೆ ಕಮಲಾಪುರದಿಂದ ಆಟೋದಲ್ಲಿ ಹೋಗಿ ತಲವಾರಘಟ್ಟ ತಲುಪಬೇಕು ಅಲ್ಲಿಂದ ಆನೆಗುಂದಿಗೆ ದೋಣಿಯಲ್ಲಿ ನದಿ ದಾಟಿ ಅಲ್ಲಿಂದ ಸುಮಾರು ಒಂದು ಕಿಲೋ ಮೀಟರ್ ನಡೆಯುತ್ತಾ ಹೋಗಬೇಕು. ಅಂತು ಯುನೆಸ್ಕೋ ಸಂಸ್ಥೆ 2008 ರಲ್ಲಿ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿತು. ಅದು ಸಹ ಲಘುವಾಹನ ಸಂಚಾರ ಮಾಡುವುದಕ್ಕೆ ಮಾತ್ರ.


ಹಂಪಿ ಮತ್ತು ಆನೆಗುಂದಿಯ ಸಂಪರ್ಕ ಕಲ್ಪಿಸುವ ತೂಗುಸೇತುವೆ ಕುಸಿದಿರುವ ದೃಶ್ಯ

ನವಂಬರ್ 11 ರಂದು ಪ್ರವಾಸೋದ್ಯಮ ಸಚಿವ ಜನಾರ್ಧನ ರೆಡ್ಡಿಯವರು ಸೇತುವೆಯನ್ನು ಪೂರ್ಣಗೊಳಿಸುವ ಕಾಮಗಾರಿಗೆ ಮರುಚಾಲನೆ ನೀಡಿದ್ದರು. ಈ ಕಾಮಗಾರಿಯ ಗುತ್ತಿಗೆಯನ್ನು ಆಂದ್ರ ಮೂಲದದವರು ಪಡೆದಿದ್ದರು. ಇಲ್ಲಿ ಕೆಲಸ ಮಾಡಲು ಸ್ಥಳಿಯರಲ್ಲದೇ ಆಂದ್ರ ಮತ್ತು ಬಿಹಾರದ ಮೂಲದ ಕಾರ್ಮಿಕರು ಬಂದಿದ್ದರು. ಸೇತುವೆ ಕುಸಿಯುತ್ತಿದ್ದಂತೆ ಗುತ್ತಿಗೆದಾರ, ವ್ಯವಸ್ಥಾಪಕರು, ಅಧಿಕಾರಿಗಳು ನಾಪತ್ತೆಯಾಗಿದ್ದಾರೆಂದು ಮತ್ತು ಸತ್ತವರ ಸಂಖ್ಯೆ 30 ದಾಟಿದೆ ಎಂದು ಸ್ಥಳಿಯರು ಹೇಳುತ್ತಾ ಇದ್ದಾರೆ. ಗಾಯಗೊಂಡವರನ್ನು ಕಮಲಾಪುರ, ಹೊಸಪೇಟೆ, ಬಳ್ಳಾರಿ, ಗಂಗಾವತಿಯ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ಈ ಸೇತುವೆಯನ್ನು ನಿರ್ಮಾಣ ಮಾಡಲು 15 ವರ್ಷಗಳ ಹಿಂದೆ ಕಾಮಗಾರಿಯನ್ನು ಪ್ರಾರಂಭಿಸಿದ್ದು ಇದಕ್ಕೆ ಹಾಕಿದ್ದ ಕಬ್ಬಿಣದ ಕಂಬಿಗಳು ತುಕ್ಕು ಹಿಡಿತ ಪರಿಣಾಮವಾಗಿ ಈ ಅವಘಡ ಸಂಬಂದಿಸಿದೆ ಎಂದು ಅಧಿಕಾರಿಗಳು ಮತ್ತು ಸ್ಥಳೀಯರು ಹೇಳ್ತಾ ಇದ್ದಾರೆ.

ಗೆಳೆಯರೇ ನೀವು ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ಟೀವಿಯಲ್ಲಿ ನೋಡಿರ್ತೀರ, ಪೇಪರ್ ನಲ್ಲಿ ಓದಿರ್ತೀರಾ. ನಾನು ಹಲವಾರು ಬಾರಿ ಇದೇ ತಲವಾರಘಟ್ಟವನ್ನು ದಾಟುತ್ತಾ ಅರ್ಧಕ್ಕೆ ನಿಂತ ಸೇತುವೆಯನ್ನ, ಮತ್ತು ಕಾಮಗಾರಿ ನಡೆಯುತ್ತಿದ್ದ ಸೇತುವೆಯನ್ನ ನೋಡುತ್ತಾ ಆನೆಗುಂದಿ ಸೇರಿದ್ದೆ. ಆದ್ದರಿಂದ ಈ ಬ್ಲಾಗ್ ಬರೀಬೇಕು ಅಂತ ಆಸೆಯಾಯಿತು ಅದಕ್ಕಾಗಿ ಬರೆದೆ. ಜನವರಿ 1 ರಂದು ಆನೆಗುಂದಿ ಬೇಟಿ ಮಾಡಿದಾಗ ಸಹ ನಮ್ಮ ಕನಸು ನನಸಾಯಿತು ಸಾರ್ ನಮ್ಮ ಸಾರಿಗೆಗೆ ಇನ್ನು ಯಾವುದೇ ಅಭಾವ ಇಲ್ಲ ಇನ್ ಮೇಲೆ ನೀವು ಸಹ ಹೊಸಪೇಟೆಯಿಂದ ನೇರವಾಗಿ ಆನೆಗುಂದಿ ತಲಪಬಹುದು ಅಂತ ಬಹಳಷ್ಟು ಜನ ಹೇಳಿದ್ರು. ಆದ್ರೆ ಕೆಲವೇ ನಿಮಿಷಗಳಲ್ಲಿ ನುಚ್ಚು ನೂರಾಯಿತು. ಮತ್ತೆ ಅವರುಗಳ ಕನಸು ನನಸಾಗುವುದು ಯಾವಾಗ ಅಂತ ಗೊತ್ತಿಲ್ಲ.

Thursday, January 8, 2009

ಚಂದ್ರ ಚೆಲ್ಲುವ ಬೆಳದಿಂಗಳು

"ಚಂದ್ರ ಚೆಲ್ಲುವ ಬೆಳದಿಂಗಳು
ಚಂದ್ರನಿಗಾಗಿ ಅಲ್ಲ ಪ್ರೇಮಿಗಳಿಗಾಗಿ"

"ಹೂ ಸೂಸುವ ಪರಿಮಳ
ಹೂವಿಗಾಗಿ ಅಲ್ಲ ದುಂಬಿಗಾಗಿ"

"ನಿನ್ನಲ್ಲಿರುವ ಸೌಂದರ್ಯ
ನಿನಗಾಗಿ ಅಲ್ಲ ನನಗಾಗಿ"

Tuesday, January 6, 2009

2009 ರ ಯೋಜನೆಗಳು/ ಆಲೋಚನೆಗಳು?

ಆಸೆಪಟ್ಟೆ

"ನಿನ್ನ ಸೌಂದರ್ಯವ ನಾ ಆಸೆಪಟ್ಟೆ
ನನ್ನನ್ನೆ ನಾ ಮರೆತು ನಿನ್ನ ಪ್ರೀತಿಸಿಬಿಟ್ಟೆ
ನೆರೆ ಹೊರೆಯವರ ಮಾತಿಗೆ ನೀ ಗಮನಕೊಟ್ಟೆ
ನೀ ನನ್ನ ಮರೆತುಬಿಟ್ಟೆ
ಬೇರೆ ಹುಡುಗನಿಗೆ ನೀ ಮನಸು ಕೊಟ್ಟೆ
ನೀ ನನ್ನ ದೂರ ಮಾಡಿಬಿಟ್ಟೆ
ನನ್ನ ಹೃದಯಕ್ಕೆ ನೀ ಖಡ್ಗವಿಟ್ಟೆ"